ಬಂಟ್ವಾಳ, ಅ.23: ಅನಂತಾಡಿ ಗ್ರಾಮದ ಬಾಬನಕಟ್ಟೆ ಸಮೀಪದ ಹಿರ್ತಂದ ಬೈಲಿನಲ್ಲಿ ಬುಧವಾರ ರಾತ್ರಿ 9:45 ಸುಮಾರಿಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿಯ ಅವಘಡದಿಂದ ಯುವಕ ಜಯರಾಜ್ನ ಸಮಯಪ್ರಜ್ಞೆಯಿಂದ ಮನೆಮಂದಿ ಸುರಕ್ಷಿತವಾಗಿ ಪಾರಾದ ಘಟನೆ ನಡೆದಿದೆ.

ಆದರೆ, ಜಯರಾಜ್ಗೆ ಮುಖ ಮತ್ತು ಕೈಗೆ ಗಾಯಗಳಾಗಿದ್ದು, ದ್ವಿಚಕ್ರ ವಾಹನ ಸೇರಿದಂತೆ ಮನೆಯ ಕಿಟಕಿ, ಬಾಗಿಲು, ವಿದ್ಯುತ್ ಉಪಕರಣಗಳು ಮತ್ತು ಇತರ ಸಾಮಗ್ರಿಗಳಿಗೆ ವ್ಯಾಪಕ ಹಾನಿಯಾಗಿದೆ.
ಘಟನೆಯ ವಿವರ:
ಜಯರಾಜ್ ಮತ್ತು ಅವರ ತಾಯಿ ಸುಶೀಲಾ ವಾಸವಾಗಿರುವ ಮನೆಯಲ್ಲಿ, ಗ್ಯಾಸ್ ಸಿಲಿಂಡರ್ ಖಾಲಿಯಾದ ಹಿನ್ನೆಲೆಯಲ್ಲಿ ಹೊಸ ಸಿಲಿಂಡರ್ ಅಳವಡಿಸಲಾಗಿತ್ತು. ಆದರೆ, ರೆಗ್ಯುಲೇಟರ್ನಲ್ಲಿ ವಾಶರ್ ಇರದ ಕಾರಣ ಗ್ಯಾಸ್ ಸೋರಿಕೆಯಾಗಿ ಒಮ್ಮೆಲೇ ಬೆಂಕಿ ಹೊತ್ತಿಕೊಂಡಿತು. ಅಡುಗೆ ಕೋಣೆಯಲ್ಲಿ ಬೆಂಕಿಯ ಜ್ವಾಲೆ ಆವರಿಸಿತು.
ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ನಿಂದ ಸೋರಿಕೆಯಾದ ಕಾರಣವೇ ಈ ಅವಘಡಕ್ಕೆ ಮೂಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯಿಂದಾಗಿ ಮನೆಯ ವಿದ್ಯುತ್ ಉಪಕರಣಗಳು, ಕಿಟಕಿ ಬಾಗಿಲು, ದ್ವಿಚಕ್ರ ವಾಹನ ಮತ್ತು ಇತರ ವಸ್ತುಗಳಿಗೆ ಗಂಭೀರ ಹಾನಿಯಾಗಿದೆ.
ಘಟನೆ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಮಾಜಿ ಅಧ್ಯಕ್ಷರಾದ ಗಣೇಶ್, ಸನತ್ ಕುಮಾರ್ ರೈ, ಗಣೇಶ್ ಬಂಟ್ರಿಂಜ, ಉಮೇಶ್ ನೆಡ್ಯಾರ ಮತ್ತು ಗ್ರಾಮ ಕರಣಿಕರು ಭೇಟಿ ನೀಡಿದ್ದಾರೆ. ಬಂಟ್ವಾಳದ ಕಾರಿಂಜೇಶ್ವರ ಗ್ಯಾಸ್ ಏಜೆನ್ಸಿಯ ಕರುಣಾಕರ ಶೆಟ್ಟಿ. ಘಟನೆಗೆ ಕಾರಣವಾದ ತಾಂತ್ರಿಕ ದೋಷಕ್ಕೆ ಪರಿಹಾರ ಕ್ರಮದ ಭರವಸೆ ನೀಡಿದ್ದಾರೆ.




