
ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ವಳಪಟ್ಟಣಂ ಬಳಿ ಹೆಬ್ಬಾವಿನೊಂದಿಗೆ ಪೆಟ್ರೋಲ್ ಬಂಕ್ ಗೆ ಬಂದ ಪಾನಮತ್ತ ವ್ಯಕ್ತಿಯೊಬ್ಬ ತನ್ನ ಫೋಟೊ ಕ್ಲಿಕ್ಕಿಸುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಒತ್ತಾಯಿಸಿದ ಘಟನೆ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ಚಂದ್ರನ್ ಎಂಬ ವ್ಯಕ್ತಿಯು ತನ್ನ ಜತೆ ಹೆಬ್ಬಾವನ್ನು ತಂದಿದ್ದ ಎನ್ನಲಾಗಿದೆ. ಹೆಬ್ಬಾವನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಫೋಟೊ ಕ್ಲಿಕ್ಕಿಸುವಂತೆ ಆತ ಕೋರಿದ್ದು, ತಕ್ಷಣವೇ ಹೆಬ್ಬಾವು ಆತನ ಕುತ್ತಿಗೆಗೆ ಸುತ್ತಿಕೊಳ್ಳಲು ಆರಂಭಿಸಿದ್ದು, ಆತ ಅಲ್ಲೇ ಬಿದ್ದುಬಿಟ್ಟ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಹೇಳಿದ್ದಾರೆ.
“ನಾನು ಎಂದೂ ಹಾವಿನ ಜತೆಗೆ ಹೋರಾಡಿದ್ದಿಲ್ಲ. ಆದರೆ ಚಂದ್ರನ್ ಕಷ್ಟಪಡುತ್ತಿರುವುದನ್ನು ನೋಡಿ, ತಕ್ಷಣವೇ ಗೋಣಿಚೀಲ ತಂದು ಆತನ ಬಳಿಗೆ ಓಡಿ ಬಂದೆ. ಹೆಬ್ಬಾವಿನ ಬಾಲವನ್ನು ಹಿಡಿದು ಎಳೆಯತೊಡಗಿದೆ. ನಿಧಾನವಾಗಿ ಅದರ ಹಿಡಿತ ಕಡಿಮೆಯಾಗಿ ಕುತ್ತಿಗೆಯಿಂದ ಬಿದ್ದುಬಿಟ್ಟಿತು. ನನಗೆ ಭಯವಾದರೂ, ಚಂದ್ರನ್ ಜೀವ ಅಪಾಯದಲ್ಲಿದ್ದ ಕಾರಣ ಈ ರಕ್ಷಣಾ ಕಾರ್ಯಕ್ಕೆ ಶಕ್ತಿ ಬಂತು” ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಅಭಿಷೇಕ್ ಅವರು ತಿಳಿಸಿದ್ದಾರೆ.




