ಮಂಗಳೂರು: ಪ್ರೀತಿಸುತ್ತಿದ್ದ ಹುಡುಗಿ ಸುತ್ತಾಟಕ್ಕೆ ಬರಲಿಲ್ಲ ಎಂಬ ಕಾರಣಕ್ಕಾಗಿ ಆಕೆ ಕೆಲಸ ಮಾಡುತ್ತಿದ್ದ ಪಿಜಿ ಕಟ್ಟಡಕ್ಕೆ ಯುವಕನೋರ್ವ ಕಲ್ಲೆಸೆದ ಘಟನೆ ನಗರ ಬೆಂದೂರು ಬಳಿ ನಡೆದಿದೆ ಎಂದು ವರದಿಯಾಗಿದೆ.


ಸುಳ್ಯ ನಿವಾಸಿ ಲೈಟಿಂಗ್ ಕೆಲಸ ಮಾಡುತ್ತಿದ್ದ ವಿವೇಕ್ (18) ಎಂಬಾತ ಯುವಕ ಬೆಂದೂರು ಬಳಿ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಹೀಗಾಗಿ ನ.2ರಂದು ಸಂಜೆ ಆಕೆ ಕೆಲಸ ಮಾಡುತ್ತಿದ್ದ ಸ್ಥಳದ ಬಳಿ ಬಂದು ತಿರುಗಾಡಲು ಬರುವಂತೆ ಕರೆ ಮಾಡಿದ್ದಾನೆ. ಆದರೆ ಯುವತಿ ಆತನೊಂದಿಗೆ ಸುತ್ತಾಟಕ್ಕೆ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್ ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ.
ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದು, ಬಳಿಕ ಕದ್ರಿ ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಲ್ಲು ತೂರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.




