ಬೆಳ್ತಂಗಡಿ: ಆಂಬ್ಯುಲೆನ್ಸ್ ಇರುವುದು ತುರ್ತು ಸಮಯದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಅವರ ಜೀವ ಉಳಿಸುವ ಕೆಲಸಕ್ಕಾಗಿ. ಆದರೆ ಇಲ್ಲೊಬ್ಬ ಆಂಬ್ಯುಲೆನ್ಸ್ನ ಚಾಲಕ ತನ್ನ ಆರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಗಳಿಗೆ ಟ್ರಿಪ್ ಹೊರಟಿದ್ದ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ದಾಟಿ ಆಂಬ್ಯುಲೆನ್ಸ್ ಉಜಿರೆಗೆ ಬರುತ್ತಿದ್ದಂತೆ ಆಂಬ್ಯುಲೆನ್ಸ್ ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸರು ಚಾಲಕನಿಗೆ ದಂಡ ವಿಧಿಸಿದ ಘಟನೆ ವರದಿಯಾಗಿದೆ.
ಬೆಂಗಳೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟಿ ಮೂಲಕ ಉಜಿರೆ ಕಡೆ ಆಂಬುಲೆನ್ಸ್ ನಲ್ಲಿ ಒಟ್ಟು ಏಳು ಜನ ಬರುತ್ತಿರುವ ಮಾಹಿತಿಯು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಅವರಿಗೆ ಬಂದಿದೆ, ತಕ್ಷಣ ಉಜಿರೆ ಬೀಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಮ್ಮ ಠಾಣೆಯ ಸಿಬಂದಿ ಸುನಿಲ್ ಅವರಿಗೆ ಮಾಹಿತಿ ನೀಡಿ ವಾಹನ ನಿಲ್ಲಿಸಿ ಠಾಣೆಗೆ ತರಲು ಸೂಚಿಸಿದ್ದಾರೆ. ಆಂಬುಲೆನ್ಸ್ ಠಾಣೆಗೆ ತಂದು ವಿಚಾರಿಸಿದಾಗ ಆಂಬುಲೆನ್ಸ್ ನಲ್ಲಿ ಗೆಳೆಯರೊಂದಿಗೆ ದೇವಸ್ಥಾನ ಟ್ರಿಪ್ ಗೆ ಹೊರಟಿರುವ ಬಗ್ಗೆ ಹೇಳಿದ್ದಾರೆ. ಸಂಚಾರಿ ಪೊಲೀಸರು ಚಾಲಕನಿಗೆ 4,500 ರೂಪಾಯಿ ಫೈನ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ.